ಬೆಂಗಳೂರು: ರಾಜ್ಯದ ರೈತರ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಜೊತೆಗೆ ಸಹಕಾರಿ ಸಂಸ್ಥೆಗಳಿಂದಲೂ ವಿವಿಧ ಸಾಲ ಸೌಲಭ್ಯಗಳು ದೊರೆಯುತ್ತಿವೆ. ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಬುಡ್ನ ಸಿದ್ದಿ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಸಹಕಾರಿ ಸಂಸ್ಥೆಗಳಿಂದ ರೈತರಿಗೆ ದೊರೆಯುವ ಪ್ರಮುಖ ಸಾಲ ಸೌಲಭ್ಯಗಳ ಮಾಹಿತಿ ಮತ್ತು ಅವುಗಳನ್ನು ಪಡೆಯುವ ನಿಯಮಗಳು ಇಲ್ಲಿವೆ:
1. ಶೂನ್ಯ ಬಡ್ಡಿದರದ ಅಲ್ಪಾವಧಿ ಸಾಲಗಳು
ರಾಜ್ಯದಲ್ಲಿ ರೈತರಿಗೆ ಈ ಕೆಳಗಿನ ಸಾಲಗಳನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಯೋಜನೆ ಜಾರಿಯಲ್ಲಿದೆ:
ರೂ. 5 ಲಕ್ಷದವರೆಗಿನ ಅಲ್ಪಾವಧಿ ಬೆಳೆ ಸಾಲ.
ರೂ. 2 ಲಕ್ಷದವರೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲ.
ಯೋಜನೆಯ ನಿಬಂಧನೆಗಳು:
ಸಾಲ ಪಡೆಯುವ ಸಂಸ್ಥೆಗಳು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್), ಲ್ಯಾ೦ಪ್ಸ್, ಪಿಕಾರ್ಡ್ ಬ್ಯಾಂಕುಗಳು ಹಾಗೂ ಡಿಸಿಸಿ ಬ್ಯಾಂಕುಗಳು ಈ ಸಾಲಗಳನ್ನು ವಿತರಿಸುತ್ತವೆ.
ಅರ್ಜಿ ಸಲ್ಲಿಕೆ: ರೈತನು ತನ್ನ ಭೂಮಿ ಅಥವಾ ವಾಸ ಸ್ಥಳ ಇರುವ ಪ್ರಾಥಮಿಕ ಸಹಕಾರ ಸಂಘದಲ್ಲಿ ಅಥವಾ ಸಂಘ ನಿಷ್ಕ್ರಿಯವಾಗಿದ್ದರೆ ಸಂಬಂಧಿಸಿದ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕು.
ಸಾಲದ ಮಿತಿ: ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ನಿಗದಿಪಡಿಸಿದ 'ಸ್ಟೇಲ್ ಆಫ್ ಫೈನಾನ್ಸ್' ಪ್ರಕಾರ ಮತ್ತು ಬೆಳೆ ವಿಮೆಯನ್ನು ಒಳಗೊಂಡಂತೆ ಗರಿಷ್ಠ ರೂ. 5 ಲಕ್ಷದ ಮಿತಿಗೆ ಮಾತ್ರ ಶೂನ್ಯ ಬಡ್ಡಿದರ ಅನ್ವಯವಾಗುತ್ತದೆ.
ಬಡ್ಡಿ ಸಹಾಯಧನ: ರೈತನು ಪಡೆದ ಸಾಲವನ್ನು ಸಂಘವು ನಿಗದಿಪಡಿಸಿದ ಗಡುವು ದಿನಾಂಕ ಅಥವಾ ಒಂದು ವರ್ಷ (ಇದರಲ್ಲಿ ಯಾವುದು ಕಡಿಮೆಯೋ) ಆ ಅವಧಿಯೊಳಗೆ ಸಕಾಲದಲ್ಲಿ ಮರುಪಾವತಿ ಮಾಡಿದರೆ ಮಾತ್ರ ಸರ್ಕಾರದಿಂದ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.
ಭೂ ದಾಖಲೆ: ಸಾಲ ಪಡೆಯಲು ನೀಡುವ ಭೂ ದಾಖಲೆಗಳಲ್ಲಿ ಇತರೇ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿರಬಾರದು.
2. ಶೇ. 3 ರ ಬಡ್ಡಿದರದ ಮಧ್ಯಮಾವಧಿ/ದೀರ್ಘಾವಧಿ ಕೃಷಿ ಸಾಲ
ರೈತರಿಗೆ ರೂ. 15 ಲಕ್ಷದವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲವನ್ನು ಶೇಕಡ 3 ರ ಬಡ್ಡಿದರದಲ್ಲಿ ವಿತರಿಸುವ ಯೋಜನೆ ಜಾರಿಯಲ್ಲಿದೆ.
ಯೋಜನೆಯ ನಿಬಂಧನೆಗಳು:
ಸಾಲದ ಮಿತಿ: ಸಾಲದ ಮಿತಿಯನ್ನು ನಬಾರ್ಡ್ ನಿಗದಿಪಡಿಸಿದ ಯುನಿಟ್ ಕಾಸ್ಟ್ ಮತ್ತು ಭದ್ರತೆಯ ಮೌಲ್ಯದನ್ವಯ ನಿಗದಿಪಡಿಸಲಾಗುತ್ತದೆ.
ಅವಧಿ: ಸಾಲವನ್ನು ಗರಿಷ್ಠ 10 ವರ್ಷಗಳ ಅವಧಿಗೆ ನಿಗದಿಪಡಿಸಿದ ಗಡುವು ದಿನಾಂಕದೊಳಗೆ ಮರುಪಾವತಿಸಿದರೆ ಮಾತ್ರ ಶೇ. 3 ರ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.
ಇತರ ಷರತ್ತುಗಳು: ಅರ್ಜಿಯನ್ನು ಪ್ರಾಥಮಿಕ ಸಹಕಾರ ಸಂಘ ಅಥವಾ ಡಿಸಿಸಿ ಬ್ಯಾಂಕಿನಲ್ಲಿ ಸಲ್ಲಿಸಬೇಕು ಮತ್ತು ಭೂ ದಾಖಲೆಗಳಲ್ಲಿ ಬೇರೆ ಸಾಲ ಪಡೆದಿರಬಾರದು ಎಂಬ ಷರತ್ತುಗಳು ಇಲ್ಲಿಯೂ ಅನ್ವಯಿಸುತ್ತವೆ.
3. ಕೃಷಿ ಉತ್ಪನ್ನಗಳ ಶೇಖರಣೆಗೆ ಅಡಮಾನ ಸಾಲ
ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಹಕಾರ ಸಂಘಗಳ ಗೋದಾಮುಗಳಲ್ಲಿ ಶೇಖರಣೆ ಮಾಡಿ, ಅದರ ಆಧಾರದ ಮೇಲೆ ಅಡಮಾನ ಸಾಲ ಪಡೆಯಬಹುದು.
ಬಡ್ಡಿದರ: ಈ ಸಾಲವನ್ನು ಶೇ. 7 ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
ಸಾಲದ ಮೊತ್ತ: ಶೇಖರಣೆ ಮಾಡಿದ ಕೃಷಿ ಉತ್ಪನ್ನದ ಮೌಲ್ಯದ ಶೇ. 70 ರಷ್ಟು ಅಥವಾ ರೂ. 2 ಲಕ್ಷ (ಇದರಲ್ಲಿ ಯಾವುದು ಕಡಿಮೆಯೋ) ಆ ಮೊತ್ತದ ಸಾಲವನ್ನು ಗರಿಷ್ಠ 6 ತಿಂಗಳ ಅವಧಿಗೆ ಪಡೆಯಬಹುದು.
ಬಡ್ಡಿ ಸಹಾಯಧನ: ಸರ್ಕಾರದಿಂದ ರೈತರ ಪರವಾಗಿ ಸಹಕಾರ ಸಂಘಗಳಿಗೆ ಶೇ. 4 ರ ಬಡ್ಡಿ ಸಹಾಯಧನ ನೀಡಲಾಗುತ್ತದೆ.
4. ಪಿಕ್ಅಪ್ ವ್ಯಾನ್ ಖರೀದಿಗೆ ಸಾಲ (ಗುಡ್ಡಗಾಡು ಪ್ರದೇಶಗಳಿಗೆ)
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶದ ರೈತರಿಗೆ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕ್ಅಪ್ ವ್ಯಾನ್ ಖರೀದಿಸಲು ಸಾಲ ನೀಡಲಾಗುತ್ತದೆ.
ಸಾಲದ ಮಿತಿ ಮತ್ತು ದರ: ಗರಿಷ್ಠ ರೂ. 7 ಲಕ್ಷದವರೆಗೆ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ವಿತರಿಸಲಾಗುತ್ತದೆ.
ಅರ್ಹತಾ ಮಾನದಂಡ: ರೈತನ ಸಾಗುವ ಭೂಮಿಯು ಶೇ. 15 ಕ್ಕಿಂತ ಹೆಚ್ಚಿನ ಇಳಿಜಾರು ಹೊಂದಿರಬೇಕು ಅಥವಾ ರೈತನ ಮನೆ, ಮಾರುಕಟ್ಟೆ ಮತ್ತು ಹೊಲದ ನಡುವಿನ ರಸ್ತೆ ಗುಡ್ಡಗಾಡು ಪ್ರದೇಶಗಳಲ್ಲಿ ಇರಬೇಕು. ಈ ಗ್ರಾಮಗಳನ್ನು ಡಿಸಿಸಿ ಬ್ಯಾಂಕುಗಳು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದಿರಬೇಕು.
ಸೌಲಭ್ಯ: ಪ್ರತಿ ಜಿಲ್ಲೆಯಲ್ಲಿ 100 ಫಲಾನುಭವಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.
5. ಗೋದಾಮು ನಿರ್ಮಾಣಕ್ಕೆ ಬಡ್ಡಿ ಸಹಾಯಧನ
ರೈತರು ತಮ್ಮ ಹಾಗೂ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮು ನಿರ್ಮಿಸಲು ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಸರ್ಕಾರ ಬಡ್ಡಿ ಸಹಾಯಧನ ನೀಡುತ್ತದೆ.
ಸಾಲದ ಮಿತಿ: ರೂ. 20 ಲಕ್ಷದವರೆಗಿನ ಸಾಲಕ್ಕೆ ಸರ್ಕಾರ ಶೇ. 7 ರಷ್ಟು ಬಡ್ಡಿ ಸಹಾಯಧನ ನೀಡುತ್ತದೆ.
ನಿರ್ಮಾಣ ನಿಯಮ: ರೈತರು ಗ್ರಾಮೀಣ ಅಥವಾ ಪಟ್ಟಣ ಪಂಚಾಯತಿ ವ್ಯಾಪ್ತಿಯ ನಿವೇಶನಗಳಲ್ಲಿ ಅಥವಾ ಕೃಷಿ ಜಮೀನುಗಳಲ್ಲಿ ನಬಾರ್ಡ್/WDRA (ವೇರ್ಹೌಸಿಂಗ್ ಡೆವಲಪ್ಮೆಂಟ್ ಆಂಡ್ ರೆಗ್ಯುಲೇಟರಿ ಅಥಾರಿಟಿ) ನಿಗದಿಪಡಿಸಿದ ವಿನ್ಯಾಸದನ್ವಯ ಗೋದಾಮು ನಿರ್ಮಿಸಬೇಕು.
ಸಾಲ ವಿತರಣೆ: ಸಹಕಾರ ಸಂಘಗಳು ಗರಿಷ್ಠ ಶೇ. 20ರಷ್ಟು ಮಾತ್ರ ವಂತಿಕೆ ಪಡೆದು, ಉಳಿದ ಮೊತ್ತವನ್ನು ಸಾಲವಾಗಿ ವಿತರಿಸಬೇಕು.
ಸಹಕಾರ ಸಂಘಗಳ ಅಪರ ನಿಬಂಧಕರು ಈ ಎಲ್ಲಾ ಯೋಜನೆಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಈ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆದು ರೈತರು ಇದರ ಪ್ರಯೋಜನ ಪಡೆಯಬಹುದು.


