ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, "ಸಿಎಂ ಏರ್ಪಡಿಸಿದ್ದ ಸಭೆಯಲ್ಲಿ ಯಾವುದೇ ಸೀರಿಯಸ್ ವಿಷಯಗಳ ಬಗ್ಗೆ ಚರ್ಚೆಯಾಗಲಿಲ್ಲ. ನಾವೆಲ್ಲರೂ ಊಟಕ್ಕೆ ಸೇರಿದ್ದೆವು. ಊಟ ಚೆನ್ನಾಗಿತ್ತು, ನಾನು ದೋಸೆ ಮತ್ತು ಎರಡು ಇಡ್ಲಿ ತಿಂದೆ" ಎಂದು ಹಾಸ್ಯಭರಿತವಾಗಿ ಹೇಳಿದರು.
ಸಭೆಯ ಕುರಿತು ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ಪುನರಚನೆ ವಿಷಯದ ಬಗ್ಗೆಯೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಎಂ.ಬಿ. ಪಾಟೀಲ್ ಖಚಿತಪಡಿಸಿದರು.
ಡಿನ್ನರ್ ಮೀಟಿಂಗ್ನಲ್ಲಿ 'ಕಲೆಕ್ಷನ್' (ಹಣ ಸಂಗ್ರಹ) ವಿಚಾರ ಚರ್ಚೆಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. "ನಮ್ಮಲ್ಲಿ ಯಾವುದೇ ಕಲೆಕ್ಷನ್ ವಿಚಾರ ಚರ್ಚೆ ಆಗಿಲ್ಲ. ಬಿಜೆಪಿಯವರು ಬಹುಶಃ ಈ ರೀತಿ ಊಟಕ್ಕೆ ಸೇರಿದಾಗ ಕಲೆಕ್ಷನ್ ವಿಚಾರ ಚರ್ಚೆ ಮಾಡಬಹುದು. ಬಿಜೆಪಿಯವರಲ್ಲಿ ಆ ಪದ್ಧತಿ ಇರುವುದರಿಂದಲೇ ಅವರಿಗೆ ಈ ರೀತಿ ಅನಿಸುತ್ತಿದೆ" ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಮೊದಲು ತಮ್ಮ ಮನೆ ನೋಡಿಕೊಳ್ಳಲಿ. ಅವರದ್ದು 'ಒಂದು ಮನೆ ನೂರು ಬಾಗಿಲು' ಆಗಿದೆ. ತಮ್ಮ ಮನೆಯನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಿ, ಕಾಂಗ್ರೆಸ್ ಬಗ್ಗೆ ಅವರಿಗೆ ಚಿಂತೆ ಬೇಡ" ಎಂದು ವ್ಯಂಗ್ಯವಾಡಿದರು.
